ತೆನಾಲಿಮಹಾಪರೀಕ್ಷೆ ಎಂಬ ಹೆಸರಿನಲ್ಲಿ ಸಂಸ್ಕೃತದ ಶಾಸ್ತ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಏಳು ವರ್ಷಗಳ ಕಾಲ ಅಧ್ಯಯನ ನಡೆಸಬೇಕಾಗುತ್ತದೆ. == ಇತಿಹಾಸ == ತೆನಾಲಿಯ ಆಂಜನೇಯಶರ್ಮಾ ಎಂಬ ವಿದ್ವಾಂಸರು ಶೃಂಗೇರಿಯ ಮಹಾಗಣಪತಿ ವಾಕ್ಯಾರ್ಥಸಭೆಯನ್ನು ನೋಡಿ ವಿದ್ವಾಂಸರ ವಾಕ್ಯಾರ್ಥಗಳನ್ನು ಆಲಿಸಿದರು. ಒಂದು ಕಾಲದಲ್ಲಿ ಸಂಸ್ಕೃತ ಪಂಡಿತರ ಆಗರವಾಗಿದ್ದ ತೆನಾಲಿಯಲ್ಲಿ ಕೇವಲ ಮೂರು ಮಂದಿಯಷ್ಟೇ ಪಂಡಿತರಿದ್ದರು. ಆಧುನಿಕ ಕಾಲದಲ್ಲೂ ವಿವಿಧ ಶಾಸ್ತ್ರಗಳಲ್ಲಿ ವಾಕ್ಯಾರ್ಥಗಳನ್ನು ನಡೆಸುವ ಯುವ ಪಂಡಿತರನ್ನು ಸೃಷ್ಟಿಸಬೇಕೆಂಬ ಒತ್ತಾಸೆಯಿಂದ ಪರೀಕ್ಷೆಗಳನ್ನು ಆರಂಭಿಸಿದರು. ದೇಶದ ವಿವಿಧೆಡೆಗಳಲ್ಲಿದ್ದ ವಿದ್ವಾಂಸರನ್ನು ಗುರುಕುಲ ಮಾದರಿಯಲ್ಲಿ ಪಾಠ ಮಾಡುವಂತೆ ಪ್ರಾರ್ಥಿಸಲಾಯಿತು. ದಾನಿಗಳಿಂದ ವಿದ್ವಾಂಸರ ಹಾಗೂ ವಿದ್ಯಾರ್ಥಿಗಳ ವೇತನದ ವ್ಯವಸ್ಥೆಯನ್ನೂ ಮಾಡಲಾಯಿತು. ೧೯೯೪ ರಿಂದ ತೆನಾಲಿಯ ಆಂಜನೇಯಶರ್ಮರ ಮನೆಯಲ್ಲಿಯೇ ಪರೀಕ್ಷೆಗಳನ್ನು ಆರಂಭಿಸಿದ್ದರಿಂದ ತೆನಾಲಿ ಪರೀಕ್ಷೆಯೆಂದೇ ಪ್ರಸಿದ್ಧವಾಯಿತು. == ಸ್ವರೂಪ == ನ್ಯಾಯ, ಅದ್ವೈತವೇದಾಂತ, ವೇದಭಾಷ್ಯ, ವ್ಯಾಕರಣ ಮೊದಲಾದ ಶಾಸ್ತ್ರಗಳಲ್ಲಿ ತೆನಾಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಹದಿನಾಲ್ಕು ಗ್ರಂಥಗಳನ್ನು ನಿರ್ದೇಶಿಸಲಾಗುತ್ತದೆ. ಪ್ರತಿ ಹಂತದಲ್ಲೂ ಒಂದೊಂದು ಗ್ರಂಥದ ಸಮಗ್ರ ಅಧ್ಯಯನ ನಡೆಸಿದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಾರೆ. ಪರೀಕ್ಷೆಯು ಲಿಖಿತ ಹಾಗೂ ಮೌಖಿಕ ರೂಪದಲ್ಲಿರುತ್ತದೆ. ಎರಡೂ ವಿಭಾಗಗಳಲ್ಲಿ ಪ್ರತಿಶತ ಐವತ್ತಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಯು ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಗಳಿಸುತ್ತಾನೆ. ಪ್ರತಿ ಪರೀಕ್ಷೆಯಲ್ಲಿಯೂ ತೇರ್ಗಡೆಯಾದ ಪರೀಕ್ಷೆಯ ಜ್ಞಾನವನ್ನು ಪರೀಕ್ಷಿಸಿಯೇ ಮುಂದಿನ ಹಂತದ ಪರೀಕ್ಷೆ ಮಾಡಲಾಗುತ್ತದೆ. == ಕಾಂಚೀ ಮಠದಿಂದ ಪರೀಕ್ಷೆ == ಆರಂಭಿಕ ವರ್ಷಗಳಲ್ಲಿ ದಾನಿಗಳ ಸಹಾಯದಿಂದ ಪರೀಕ್ಷೆಗಳು ಸುಗಮವಾಗಿ ನಡೆದವು. ೨೦೦೬ ರಲ್ಲಿ ಹಣದ ಕೊರತೆಯಿಂದಾಗಿ ಪರೀಕ್ಷೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಯಿತು. ಆ ಸಂದರ್ಭದಲ್ಲಿ ಕಂಚಿ ಮಠದ ವತಿಯಿಂದ ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಮಾಡಲಾಯಿತು. ೧೪ ಪರೀಕ್ಷೆಗಳ ನಂತರ ಕಂಚಿ ನಗರದಲ್ಲಿ ಮಹಾಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಹಾಗೂ ಪುರಸ್ಕಾರಗಳನ್ನು ನೀಡಲಾಗುತ್ತದೆ. ತೆನಾಲಿ ಪರೀಕ್ಷೆಯನ್ನು ಶ್ರೀ ಕಾಂಚಿವೇದಾಂತಶಾಸ್ತ್ರ ಸಭಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. == ತೇರ್ಗಡೆ == ತೆನಾಲಿಪರೀಕ್ಷೆಯಲ್ಲಿ ಉತ್ತೀರ್ಣರಾದವರು ಶಾಸ್ತ್ರರತ್ನ ಎಂಬ ಬಿರುದನ್ನು ಪಡೆಯುತ್ತಾರೆ. ತೆನಾಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮ ಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ. ೨೦೧೯ ರಲ್ಲಿ ಹದಿನಾರು ವರ್ಷದ ಬಾಲಕ ಪ್ರಿಯವ್ರತ ಪಾಟೀಲ್ ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಲ್ಲಿ ಕಿರಿಯ ವಯಸ್ಸಿನವನಾಗಿದ್ದಾನೆ. == ಉಲ್ಲೇಖಗಳು ==